Tuesday, March 13, 2007

ಪ್ರೇಮ ಕವಿಯ ದುರಂತ ಕಥೆ

ಕಲಾಗಂಗೋತ್ರಿ ತಂಡ ಕವಿ ಕೆ.ಎಸ್. ನರಸಿಂಹಸ್ವಾಮಿ ಜೀವನಾಧಾರಿತ ಕಥೆಯನ್ನು 'ಮೈಸೂರು ಮಲ್ಲಿಗೆ' ನಾಟಕ ರೂಪಕ್ಕೆ ತಂದಿದ್ದಾರೆ. ಮಾರ್ಚ್ ೧೩ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕದ ಪ್ರದರ್ಶನವಿತ್ತು.

ಇಲ್ಲಿ ಬಳೆಗಾರ ಚೆನ್ನಯ್ಯನ ಪಾತ್ರದ ಮೂಲಕ ಹೊಸ ಪೀಳಿಗೆಗೆ ಮಲ್ಲಿಗೆ ಕವಿಯ ಕಥೆ ಹೇಳಿಸಿರುವುದು. ಬಳೆಗಾರ ಚೆನ್ನಯ್ಯ ಎರಡು ಪೀಳಿಗೆಯ ಕೊಂಡಿಯಾಗುವ ಪಾತ್ರ. ನಾಟಕದ ಮೊದಲ ಭಾಗ ಕವಿಯ ಯೌವನ, ಕವಿತಾ ರಚನೆ, ಮದುವೆ ಮುಂತಾದವುಗಳನ್ನು ಪರಿಚಯಿಸುತ್ತದೆ. ಬಳೆಗಾರ ಚೆನ್ನಯ್ಯ ಬಾಗಿಲಿಗೆ, ತೌರಸುಖದೊಳಗೆನ್ನ, ಸಿರಿಗೆರೆಯ ನೀರಿನಲಿ, ರಾಯರು ಬಂದರು, ನಿನ್ನ ಪ್ರೇಮದ ಪರಿಯ ಮುಂತಾದ ನರಸಿಂಹ ಸ್ವಾಮಿಯವರ ಕವನಗಳನ್ನು ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸಿ ಈ ಭಾಗದ ಕಥೆಯನ್ನು ಹೆಣೆದಿದ್ದಾರೆ.

ಈ ಕಥೆಯನ್ನು ಪರಿಚಯಿಸುವಾಗ ಇಂದಿನ ಸಮಾಜದ ಚಿತ್ರಣವನ್ನೂ ನಾಟಕಕಾರರು ಸೂಕ್ಷ್ಮವಾಗಿ ಮಾಡಿಸಿದ್ದಾರೆ. ಬಳೆಗಾರ ನೀರನ್ನು ಕೇಳಿದಾಗ ಈ ಪೀಳಿಗೆಯ ಪುಟ್ಟಿ ಪೆಪ್ಸಿ ತಂದುಕೊಡುವುದು, ಮರಗಳನ್ನು ಕಡಿಯುವುದು, ಉತ್ತಮ ಕವಿತೆಗಳನ್ನು ಇಂದಿನ ಚಲನಚಿತ್ರಗಳಲ್ಲಿ ಉಪಯೋಗಿಸಿರುವುದು (ಉದಾಹರಣೆಗೆ, ನವಿಲೂರಿಗೆ ೫೦ ವರ್ಷದ ನಂತರ ಬಳೆಗಾರ ಬಂದಾಗ ಅವನ ಮುಂದೆ 'ಭಾಗ್ಯದ ಬಳೆಗಾರ'ದ ಇತ್ತೀಚಿನ ಕಳಪೆ remix version ಹಾಡಿಕೊಂಡು ಹೋಗುವುದು!)..

ಎರಡನೇ ಭಾಗದಲ್ಲಿರುವುದು ಅವರು ಜೀವನದಲ್ಲಿ ಎದುರಿಸಿದ ಸಾಂಸಾರಿಕ, ಆರ್ಥಿಕ ಕಷ್ಟಗಳ ಕಥೆ. ಮಗಳ ದುರಂತ ಕಥೆ, ಮಕ್ಕಳ ಜೊತೆಯಿರದೇ ಗಂಡ-ಹೆಂಡತಿ ಇಬ್ಬರೇ ಜೀವನ ನಡೆಸುತ್ತಿರುವಾಗ ಮಗ ಬಂದು ನಮ್ಮೊಟ್ಟಿಗಿರಿ ಎಂದಾಗ ನಡೆಯುವ ಸಂಭಾಷಣೆ ನಿಜಕ್ಕೂ ಮನ ಕಲಕುತ್ತದೆ. ಮಗನ ಮೇಲಿನ ಕೋಪವನ್ನು 'ಯಾತ್ರೆ' ಕವಿತೆಯ ಮೂಲಕ ತೀರಿಸಿಕೊಂಡು, ಆ ಕವಿತೆಯನ್ನು ಮಗ ತನ್ನ ಸ್ನೇಹಿತನ ಮೂಲಕ ತಿಳಿಯುವುದು, ಆಗ ಕವಿ ಇರಬಹುದು, ಆದರ ಮೊಮ್ಮಗನ ಮೇಲಂತೂ ಪ್ರೀತಿಯಿಂದ 'ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು..' ಬರೆದಿರುವುದನ್ನು ಮಗನಿಗೆ ಹೇಳುವ ಭಾವುಕ ಸನ್ನಿವೇಶ ಇವುಗಳಿಂದ ಕೂಡಿವೆ.

ಕೆಲಸದಲ್ಲಿನ ಪ್ರಾಮಾಣಿಕತೆಯಿಂದ, ತಮಗಾಗಿ ಒಂದು ಸ್ವಂತ ಮನೆ ಮಾಡಿಕೊಳ್ಳಲಾಗದೇ ಊರಿಂದೂರಿಗೆ ವರ್ಗವಾಗುವಾಗ, ಬಳೆಗಾರ ಕೇಳುವ ಪ್ರಶ್ನೆಗೆ ಅವರು ಹೇಳೋದು 'ಇರೂರಿಗೆ ಒಂದೇ ಮನೆ, ಇರದವರಿಗೆ ನೂರಾರು'. ಹುಬ್ಬಳ್ಳಿಯ ಭಿಕ್ಷುಕ ಇವರ ಹಾಡು ಹೇಳಿ ದಿನಾಲೂ ೫ ರೂ ಸಂಪಾದಿಸುವಾಗ ತಿಂಗಳ ಖರ್ಚಿನ ಲೆಕ್ಕ ತೂಗುವಾಗ ೧-೨ ರೂ ಗೆ ಲೆಕ್ಕ ಹಾಕುವುದು, ೨೫-೫೦ ರೂ ಸಾಲಕ್ಕೆ ಪರದಾಡುವ ಸನ್ನಿವೇಶ..ಇತ್ಯಾದಿ.

ಕಡೆಯ ಭಾಗ ಕವಿ-ಪತ್ನಿಯ ಸಂಭಾಷಣೆ. ಹೆಂಡತಿಯೇ ಅವರ ಜೀವನಕ್ಕೆ ಸ್ಫೂರ್ತಿ. ಆಕೆ ಅವರ ಕವಿತೆಗಳ ವಿಮರ್ಶಕಿಯೂ ಹೌದು ' ನೀವು ಪ್ರೀತಿಯಿಂದ ಬರೆದಿರಿ, ಸುಖದಿಂದ ಬರೆದಿರಿ, ಕಷ್ಟ-ನಷ್ಟದಿಂದ ಬರೆದಿರಿ, ಆದರೆ ನೆಮ್ಮದಿಯಿಂದ ಬರೆಯಲಿಲ್ಲ!' ಎನ್ನುತ್ತಾರೆ ಅವರ ಹೆಂಡತಿ. ನೆಮ್ಮದಿಯಿದ್ದಾಗ ಕವಿತೆ ಬರೆಯಕ್ಕಾಗುಲ್ಲ ಎನ್ನುತ್ತಾರೆ ಕವಿ ಆಗ! 'ಮೊದಲ ದಿನ ಮೌನ', 'ಅಕ್ಕಿ ಆರಿಸುವಾಗ', ದೀಪವು ನಿನ್ನದೇ' ಕವಿತೆಗಳು ಇವರಿಬ್ಬರ ನಡುವಿನ ಸಂವಾದಕ್ಕೆ sentimental touch ಕೊಡುತ್ತದೆ. ಇವರ ದಾಂಪತ್ಯ ಚಿರಂತನ ಪ್ರೇಮದ ಸಂಕೇತ. ನಾಟಕ ಅಂತ್ಯವೂ ಅದನ್ನೇ ಸೂಚಿಸುತ್ತದೆ.

ಕಡೆಯಲ್ಲಿ ಬಳೆಗಾರ ಚೆನ್ನಯ್ಯ, ಪುಟ್ಟಿಯ ಮೂಲಕ ಮಲ್ಲಿಗೆ ಗಿಡ ನೆಡೆಸಿ ನೀರೆರಿಸಿ, 'ಹೀಗೆ ಮಲ್ಲಿಗೆಯ, ಮಲ್ಲಿಗೆ ಕವಿ ಹರಡಿದ ಕಂಪು ನೂರಾರು ವರ್ಷ ಉಳಿಯಲಿ, ಬೆಳೆಯಲಿ' ಎಂಬ ಸಂದೇಶ ಹೇಳುವ ಮೂಲಕ ಉತ್ತಮ ಗುಣಮಟ್ಟದ ಈ ನಾಟಕ ಸುಂದರವಾಗಿ ಅಂತ್ಯಗೊಳ್ಳುತ್ತದೆ.

ರಾಜೇಂದ್ರ ಕಾರಂತ್ ಈ ನಾಟಕದ ಸಾಹಿತ್ಯ ಬರೆದಿದ್ದಾರೆ. ಸಂಭಾಷಣೆಗಳಂತೂ ಅತ್ಯದ್ಭುತ. ಅವರು ಚೆನ್ನಯ್ಯನ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ. ಡಾ|| ಬಿ. ವಿ. ರಾಜಾರಾಮ್ ಈ ನಾಟಕದ ನಿರ್ದೇಶಕರು- ನಾಟಕದ ಯಾವುದೇ ದೃಶ್ಯವೂ ಅನವಶ್ಯಕವೆನಿಸುವುದಿಲ್ಲ. ಆ ಮಟ್ಟಿಗೆ ಸಂಭಾಷಣೆ, ದೃಶ್ಯಗಳ ಹಿಡಿತದೊಂದಿಗೆ ಉತ್ತಮವಾಗಿ ನಿರ್ದೇಶಿಸಿದ್ದಾರೆ. ಜೊತೆಗೆ ನರಸಿಂಹಸ್ವಾಮಿಯವರ ವೃದ್ಧಾಪ್ಯದ ಪಾತ್ರವನ್ನು top-class ಆಗಿ ಮಾಡಿದ್ದಾರೆ. ಮಿಕ್ಕಂತೆ ಕವಿಯ ಹೆಂಡತಿ (ವಿದ್ಯಾ) , ಕವಿಯ ಯೌವನದ ಪಾತ್ರಧಾರಿ (ಪ್ರದೀಪ್) , ನಡುಜೀವನದ ಪಾತ್ರಧಾರಿ (ಶಂಕರ್ ನಾರಾಯಣ್) ಅವರ ನಟನೆ ಕೂಡ ಚೆನ್ನಾಗಿದೆ.

ವಿನಯ್ ಕುಮಾರ್, ಪ್ರತಿಮಾ ಅವರ ಅತ್ಯುತ್ತಮ ಹಿನ್ನೆಲೆ ಗಾಯನ ಕೂಡ ಈ ನಾಟಕದ ಮತ್ತೊಂದು ಪ್ರಮುಖ ಆಕರ್ಷಣೆ. ವೇಷ, ಅಲಂಕಾರ ಕೂಡ ಒಳ್ಳೆಯದಿತ್ತು - ವಿಶೇಷವಾಗಿ ಬಳೆಗಾರನ ಮತ್ತು ಕವಿಯ ವೃದ್ಧಾಪ್ಯದ ಪಾತ್ರದ ಅಲಂಕಾರ. ಧ್ವನಿವರ್ಧಕ, ಬೆಳಕಿನ ವ್ಯವಸ್ಥೆಯ ಗುಣಮಟ್ಟ ಇನ್ನಷ್ಟು ಚೆನ್ನಾಗಿರಬಹುದಿತ್ತು.

ಟಿ. ಎನ್. ಸೀತಾರಾಮ್ ಅವರು ಒಮ್ಮೆ ಹೇಳಿದ್ದು 'ನಮ್ಮ ಮುಂದಿನ ಪೀಳಿಗೆಗೆ ಕುವೆಂಪು, ಬೇಂದ್ರೆ, ನರಸಿಂಹಸ್ವಾಮಿ, ಅಡಿಗ ಇವರ ಕಾವ್ಯವನ್ನು ಏಕೆ ಓದಬೇಕು ಎಂದು ತಿಳಿಸಬೇಕು.' ಈ ನಾಟಕ ನೋಡಿದರೆ ನಮ್ಮ ನಾಡಿನದೇ ಆದ ಭಾವುಕತೆ ಇರುವ, ಹೃದಯಕ್ಕೆ ಹತ್ತಿರವಾಗುವ ಕಾವ್ಯದ ಪರಿಚಯ ಈ ನಾಟಕ ಮಾಡಿಕೊಡುತ್ತದೆ.

'ಮೈಸೂರು ಮಲ್ಲಿಗೆ' ಒಂದು ಉತ್ತಮ ನಾಟಕ. ೨೦೦೭, ಮಾರ್ಚ್ ೨೪ ಮತ್ತು ೨೫ ರಂದು ರಂದು 'ರಂಗ ಶಂಕರ' ದಲ್ಲಿ ಮತ್ತು ೩೦ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಈ ನಾಟಕದ ಪ್ರದರ್ಶನವಿದೆ.

ನಾನಂತೂ ಮಾರ್ಚ್ ೨೪ಕ್ಕೆ ಕಾಯುತ್ತಿರುವೆ!!

No comments: