Sunday, April 8, 2007

ಗುರುವಂದನೆ (Guru Vandane)

ಮೊನ್ನೆ ೦೧-೦೪-೨೦೦೭ ರಂದು ಸಿದ್ಧಗಂಗಾ ಮಠಾಧೀಶರಾದ ಸ್ವಾಮೀಜಿ ಶ್ರೀ ಶಿವಕುಮಾರ ಸ್ವಾಮಿಗಳಿಗೆ ರಾಜ್ಯ ಸರ್ಕಾರ 'ಕರ್ನಾಟಕ ರತ್ನ' ನೀಡಿತು. ಅಂದು ಸ್ವಾಮೀಜಿಯವರು ನೂರನೇ ವರ್ಷಕ್ಕೆ ಕಾಲಿಟ್ಟ ದಿನ ಕೂಡ. ಸುಮಾರು ೭ ದಶಕಗಳಿಂದ ಅನ್ನ, ಜ್ಞಾನ ದಾಸೋಹಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಈ ಪ್ರಶಸ್ತಿ ನೀಡುವ ಮೂಲಕ ಸರ್ಕಾರ ಈ ಪ್ರಶಸ್ತಿಗೆ ಗೌರವ ತಂದುಕೊಟ್ಟಿದೆ.

ಜಾತಿ-ಮತ ಭೇದ ತೋರದೆ ಸಿದ್ಧಗಂಗಾ ಮಠದ ಸ್ವಾಮೀಜಿಯವರು ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ, ನೆಲೆ ಮತ್ತು ವಿದ್ಯಾಭ್ಯಾಸಕ್ಕೆ ಅವಕಾಶ ಒದಗಿಸಿದ್ದಾರೆ. ಸುಮಾರು ೯೦೦೦ ವಿದ್ಯಾರ್ಥಿಗಳಿಗೆ ಈ ರೀತಿ ಆಶ್ರಯ ದೊರೆತಿದೆ. ಸ್ವಾಮೀಜಿಯವರ ಜೀವನವೇ ಒಂದು ಉತ್ತಮ ಸಂದೇಶ.

ಅನ್ನ, ಜ್ಞಾನ ದಾಸೋಹದ ಸಂತನಿಗೆ ನಮನಗಳು.

ಕರ್ನಾಟಕದ ಮಟ್ಟಿಗೆ ಹೇಳಬೇಕಾದರೆ ಇಲ್ಲಿನ ಮಠಗಳು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾಭ್ಯಾಸಕ್ಕೆ ಕೊಟ್ಟ ಪ್ರಾಮುಖ್ಯತೆಯ ಫಲವಾಗಿ ಇಂದು ಬೇರೆ ಯಾವುದೇ ರಾಜ್ಯಗಳಿಗಿಂತ ಪ್ರಾಥಮಿಕ, ಮಾಧ್ಯಮ ಶಿಕ್ಷಣ ಉತ್ತಮ ಮಟ್ಟದಲ್ಲಿದೆ. ಈ ಮಠಗಳು ಯಾವುದೇ ರೀತಿಯ ಅಜೆಂಡಾಗಳನ್ನಿಟ್ಟುಕೊಳ್ಳದೇ ಸುಮಾರು ದಶಕಗಳಿಂದ ಕೆಲಸ ಮಾಡುತ್ತಿವೆ. ಸುತ್ತೂರು ಮಠ, ಸಿದ್ಧಗಂಗಾ ಮಠ, ಮೂರು ಸಾವಿರ ಮಠ, ಧರ್ಮಸ್ಥಳ, .. ಈ ರೀತಿ ಸುಮಾರು ಎಲ್ಲ ಸಂಸ್ಥೆಗಳೂ ನಿಸ್ವಾರ್ಥ ಸೇವೆಯಲ್ಲಿ ತೊಡಗಿವೆ. ನನ್ನೂರಿನ ಸುತ್ತೂರು ಮಠದ 'ವಿದ್ಯಾಪೀಠ'ದ ಬಗ್ಗೆ ಹೇಳಬೇಕಾದರೆ, ಮತ್ತೊಂದು ದೊಡ್ಡ ಲೇಖನ ಬೇಕಾಗುತ್ತದೆ.