Wednesday, March 28, 2007

ಡಿ.ವಿ.ಜಿ. (DVG)

ನಮ್ಮ ಸಂಸ್ಥೆಯ ಸಾಹಿತ್ಯಾಸಕ್ತರ ತಿಂಗಳ ಸಭೆ ಎಂದಿನಂತೆ ಉತ್ಸಾಹದಿಂದ ಮುಂದುವರೆಯುತ್ತಿದೆ! ಈ ತಿಂಗಳ ಸಭೆಯಲ್ಲಿ ಡಿ.ವಿ. ಗುಂಡಪ್ಪನವರ ಜೀವನ, ಕೃತಿಗಳ ಬಗ್ಗೆ ಹಲವರು ಮಾತನಾಡಿದರು.

ಡಿ.ವಿ.ಜಿ ಅವರ ಸ್ಥೂಲ ಪರಿಚಯ ಇಲ್ಲಿದೆ.

ಕಾರ್ಯಕ್ರಮದಲ್ಲಿ, ತಮಗಿಷ್ಟವಾದ ಕಗ್ಗ ಪದಗಳ ಬಗ್ಗೆ ಸವಿತಾ, ಕಾರ್ತಿಕ್, ಪದ್ಮನಾಭ ಮತ್ತು ವಿಶ್ವೇಶ್ವರ ಹೆಗಡೆ ತಮ್ಮ ಅನಿಸಿಕೆ/ಅನುಭವ ಗಳನ್ನು ಹಂಚಿಕೊಂಡರು.

ಡಿ.ವಿ.ಜಿ ಮೇಲಿನ ಪದ್ಮನಾಭ ಅವರ ಲೇಖನ 'ಡಿವಿಜಿಯವರ ಮುಕ್ತಕಗಳ ಮೆರುಗು ಹಾಗೂ ಮೌಲ್ಯಗಳ ಹರಹು' ಇಲ್ಲಿ ಮತ್ತು ಇಲ್ಲಿದೆ .

ಇತ್ತೀಚಿನ ಒಂದು ಕಾರ್ಯಕ್ರಮದಲ್ಲಿ ಹಿರಿಯ ಐ.ಎ.ಎಸ್ ಅಧಿಕಾರಿ ಗೋಪಾಲಕೃಷ್ಣೇಗೌಡರು ಕಗ್ಗದ ಅಧ್ಯಯನ ಹೇಗೆ ತಮ್ಮ ವೃತ್ತಿಜೀವನದಲ್ಲಿ ಸಹಾಯ ಮಾಡಿತು ಎಂಬುದನ್ನು ಚೆನ್ನಾಗಿ ವಿವರಿಸಿದರು. ಅವರು ತುಮಕೂರು ಜಿಲ್ಲಾಧಿಕಾರಿಯಾಗಿದ್ದಾಗ ಆದ ಗೋಳೀಬಾರ್, ಚಿಕ್ಕಮಗಳೂರಿನಲ್ಲಿದ್ದಾಗ ನಡೆದ ಗಲಭೆ, ವಿಧಾನ ಮಂಡಲವನ್ನು ನೇರವಾಗಿ ಎದುರಿಸಿ ಉತ್ತರ ಕೊಡಬೇಕಾದ ಸಂದರ್ಭ - ಹೀಗೆ ಇಂತಹ ಸಮಯಗಳಲ್ಲಿ ಕಗ್ಗ ಹೇಗೆ ಎಲ್ಲವನ್ನೂ ಸ್ವೀಕರಿಸಿ , ಎದುರಿಸಲು ಸಹಾಯ ಮಾಡಿತು ಎಂಬುದನ್ನು ತಿಳಿಸಿದರು.

ಉಮರನ ಒಸಗೆ (ಒಸಗೆ = ಸಂದೇಶ, ಸುದ್ದಿ) ಮತ್ತು ಅಂತ:ಪುರ ಗೀತೆಗಳು (ಬೇಲೂರು ಚೆನ್ನಕೇಶವ ಮತ್ತು ಶಿಲಾಬಾಲಿಕೆಯರ ಬಗ್ಗೆ) - ಇವುಗಳ ಬಗ್ಗೆ
ಅನುಪ್ ಸ್ವಾರಸ್ಯವಾಗಿ ವಿವರಿಸಿದರು.

ಹರೀಶರು 'ಸಾಹಿತಿ, ಪತ್ರಿಕೋದ್ಯಮಿ, ಚಿಂತಕ, ದಾರ್ಶನಿಕ' ಡಿ.ವಿ.ಜಿ ಬಗ್ಗೆ ಮಾತನಾಡಿದರು. ಅವರ ಭಾಷಣದ (ನನ್ನ ನೆನಪಿನಲ್ಲುಳಿದಷ್ಟು) ಸಾರಾಂಶ...

ಡಿ.ವಿ.ಜಿ ಅವರು ಮದ್ರಾಸ್ ನ ಒಂದು ಪತ್ರಿಕೆಗೆ ಕೆಲಸ ಮಾಡುತ್ತಿದ್ದಾಗ ಒಬ್ಬ ಸಂಪಾದಕ ಇವರ ಲೇಖನವನ್ನು ಸ್ವಲ್ಪ ತಿರುಚಿ ಬರೆದುದಕ್ಕೆ ತೋರಿದ ಪ್ರತಿಭಟನೆಯೆಂದರೆ ರಾಜಿನಾಮೆ ಕೊಟ್ಟು, ಮೌನವಾಗಿ ಬೆಂಗಳೂರಿನ ರೈಲು ಹಿಡಿದಿದ್ದು!

ಸಂಸ್ಕೃತ ಪಂಡಿತರಾಗಿದ್ದರೂ ಅವರ ಬರವಣಿಗೆಯಲ್ಲಿ ಕಾಣುವುದು ಹೆಚ್ಚಾಗಿ ಕನ್ನಡ ಪದಗಳು. ಇದಕ್ಕೆ ಕಾರಣ ಹಿರಿಯಾರಾದ ಎಸ್.ಜಿ.ನರಸಿಂಹಚಾರ್ ಅವರ ಸಲಹೆಗಳು. ಒಮ್ಮೆ ಡಿ.ವಿ.ಜಿ ಅವರ ಲೇಖನದಲ್ಲಿ 'ಆಧುನಿಕ' ಅನ್ನುವ ಪದದ ಬದಲು 'ಹೊಸದು' ಎಂದು ಉಪಯೋಗಿಸಲು ಸೂಚಿಸಿದರು. ಕಗ್ಗ ಓದಲು ಕೆಲವು ಕಡೆ ನಮಗೆ ಕಷ್ಟವಾಗುವುದು ಕನ್ನಡ ಪದಗಳ ಬಳಕೆಯಿಂದಲೇ!

ಡಿ.ವಿ.ಜಿ ಯವರಿಗೆ ಹೆಂಗಸಿರ ಬಗ್ಗೆ ಬಹಳ ಗೌರವವಿತ್ತು. ಚಿಕ್ಕ ವಯಸ್ಸಿನಲ್ಲೇ ಹೆಂಡತಿಯನ್ನು (ದುರ್ಘಟನೆಯಲ್ಲಿ) ಕಳೆದುಕೊಂಡ ಇವರಿಗೆ ತಾಯಿ ಹಾಗೂ ಬಂಧುಮಿತ್ರರು ಮತ್ತೊಂದು ಮದುವೆಗೆ ಒತ್ತಾಯಿಸಿದಾಗ ಅವರು ಹೇಳಿದ್ದು 'ಮನೆಯಲ್ಲಿ ಒಬ್ಬ ತಂಗಿ ವಿಧವೆ. ಅವಳಿಗೆ ಮದುವೆ ಆಗುವುದು ಕಷ್ಟ, ಅವಳ ಮದುವೆ ಆದ ಮೇಲೆ ನಾನು ಆಗುತ್ತೀನಿ'. ಆಗಿನ ಸಮಾಜದಲ್ಲಿ ವಿಧವಾ ವಿವಾಹ ಕಷ್ಟವಾಗಿತ್ತು ಮತ್ತು ಡಿ.ವಿ.ಜಿಯವರು ಈ ಘಟನೆಯ ಮೂಲಕ ಮಾನವೀಯ ಮೌಲ್ಯವನ್ನು ಮೆರೆದರು. ಇವರ ಈ ಆದರ್ಶದಿಂದ ಟಿ.ಎಸ್. ವೆಂಕಣ್ಣಯ್ಯ ಮತ್ತು ಬಿ.ಎಂ. ಶ್ರೀಕಂಠಯ್ಯನವರು ಪ್ರಭಾವಿತರಾಗಿ ಇದೇ ರೀತಿ ನಡೆದುಕೊಂಡರು.

ಶೇಕ್ಸ್ ಪಿಯರ್ ನ ಹಲವಾರು ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ಇವರ ಇಂಗ್ಲಿಷ್ ಭಾಷಾಜ್ಞಾನ ಕೂಡ ಅದ್ಭುತ. ಪಶ್ಚಿಮದೇಶಗಳ ಹಲವಾರು ಕವಿ, ಚಿಂತಕರ ಕೃತಿಗಳನ್ನು ಓದಿದ್ದರು ಮತ್ತು ಅವುಗಳಿಂದ ಪ್ರಭಾವಿತರಾಗಿದ್ದರು.

'ಜ್ಞಾಪಕ ಚಿತ್ರಶಾಲೆ' ಯಲ್ಲಿ ಅವರು ದೇಶದ, ನಾಡಿನ ಮಹಾನ್ ವ್ಯಕ್ತಿಗಳ ಬಗ್ಗೆಯೂ ಬರೆದಿದ್ದಾರೆ...ಬೀದಿಬದಿಯ ಬಡಕುಟುಂಬವನ್ನೂ, ಜನಸಾಮಾನ್ಯರ ಬದುಕು ಔದಾರ್ಯಗಳನ್ನೂ ಚಿತ್ರಿಸಿದ್ದಾರೆ.

'ಸಂಸ್ಕೃತಿ', 'ಬಾಳಿಗೊಂದು ನಂಬಿಕೆ' ಪುಸ್ತಕಗಳಲ್ಲಿರುವ ಚಿಂತನೆ, ವಿಚಾರಗಳನ್ನು ನಾವು ಒಮ್ಮೆಯಾದರೂ ಓದಲೇಬೇಕು.

ರಾಜಕೀಯದಲ್ಲಿ ಸಹ ಇವರಿಗೆ ಆಸಕ್ತಿಯಿತ್ತು. ಅನೇಕ ರಾಜಮಹಾರಾಜರುಗಳು ಪತ್ರದ ಮೂಲಕ ತಮ್ಮ ಸಮಸ್ಯೆಗಳನ್ನು ಬರೆದು ಪರಿಹಾರ ಸೂಚಿಸಲು ಕೋರುತ್ತಿದ್ದರು. ಅಂಬೇಡ್ಕರ್ ಅವರು ತಮ್ಮ ಕೃತಿಗಳ ಕರಡನ್ನು ಕಳಿಸುತ್ತಿದ್ದುದು ಇವರಿಗೆ! ಸರ್ ಎಂ. ವಿಶ್ವೇಶ್ವರಯ್ಯ ನವರ ಆಪ್ತ ಕಾರ್ಯದರ್ಶಿಯಾಗಿ ಸಹ ಇವರು ಕೆಲಸ ಮಾಡಿದ್ದರು. ಅಮೇರಿಕದಲ್ಲಿ ನೆಲೆಸಿದ್ದ ಚಿಂತಕ ಆನಂದ ಕುಮಾರಸ್ವಾಮಿ ಅವರನ್ನು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಅಲ್ಲಿನ ಪತ್ರಕರ್ತರು 'ಭಾರತಕ್ಕೆ ನಿಮ್ಮ ಸಂದೇಶವೇನು?' ಎಂದು ಕೇಳಿದಾಗ ಅವರು ಗಾಂಧಿ, ಡಿವಿಜಿ ಯವರಂತೆ ಬದುಕಬೇಕು ಎಂದಿದ್ದರು. ದೇಶದ ಈ ಮಹಾನ್ ವ್ಯಕ್ತಿಯನ್ನು ನಾವು ಕೆಲವರು ಕರ್ನಾಟಕಕ್ಕೆ, ಬೆಂಗಳೂರಿಗೆ, ಬಸವನಗುಡಿಗೆ ಸೀಮಿತಗೊಳಿಸಿದ್ದೇವೆ!

Public life must be spiritualized ಎಂಬುದನ್ನು ನಂಬಿದ್ದವರು ಮತ್ತು ಅಕ್ಷರಶಃ ಪಾಲಿಸಿದವರು ಡಿ.ವಿ.ಜಿ.

2 comments:

Anonymous said...

ನಮಸ್ಕಾರ,
ಡಿ.ವಿ.ಜಿಯವರ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಿರ ಧನ್ಯವಾದಗಳು....
ಸಾಕ್ಷಿರಾಜ್

Unknown said...

ಡಿ.ವಿ.ಜಿಯವರ ಬಗ್ಗೆ ತಾವು ತೋರಿಸಿದ ಆಸಕ್ತಿಗಾಗಿ ಕೃತಜ್ಞತೆಗಳು. ತುಂಬಾ ಚೆನ್ನಾಗಿ ಬರೆದಿರುವಿರೀ ಕೂಡಾ....

http://kannadahanigalu.com/ ನಲ್ಲಿ ಹಾಸ್ಯ, ಕವನ, ಹನಿಗವನ, ಮುಂತಾದುವವನ್ನು ಓದಬಹುದು, ಹಾಗೆಯೇ ಪ್ರಕಟಿಸಬಹುದು ಕೂಡಾ....

ಇಲ್ಲಿ ಉತ್ಸಾಹಿ ಪ್ರತಿಭೆಗಳ ಕವನ ಸಂಕಲನಗಳನ್ನು ಪ್ರಕಟಿಸಿದೆ.

ಸಾದ್ಯವಾದಲ್ಲಿ ನಮ್ಮ ಅಂತರ್ಜಾಲವನ್ನು ವೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ !!!

ಇಂತಿ
ಕನ್ನಡ ಹನಿಗಳ ಬಳಗ
http://kannadahanigalu.com/